ಅಮ್ಮಾ ನೀನು ಅದೆಷ್ಟು ಹರಕೆ ಹೊತ್ತಿದ್ದೆ ದೇವರಿಗೆ,
ಮಕ್ಕಳ ಬಗ್ಗೆ, ನಿನ್ನ ಬಗ್ಗೆ, ನೀನೆಂದು ದೇವರಲ್ಲಿ ಕೇಳಿಕೊಂಡವಳಲ್ಲ, ಯಾಕಂದ್ರೆ ತಾಯಿ ಹೃದಯವೇ ಹಾಗೆ,ತನಗಾಗಿ ಏನನ್ನು ಬೇಡುವುದಿಲ್ಲ,
ಆದರೆ ಮಕ್ಕಳು ನಿನಗಿಂತ ಹೆಚ್ಚಾಗಿ ನಿನ್ನ ಆಸ್ತಿಯನ್ನು ಇಷ್ಟಪಟ್ಟರು ಆಸ್ತಿ ಬರೆಸಿಕೊಂಡು ದೇವಸ್ಥಾನದ ಮುಂದೆ ಬಿಟ್ಟು ಊಟಕ್ಕೂ ದಿಕ್ಕಿಲ್ಲದೆ ಕಣ್ಣೀರಲ್ಲಿ ದಿನ ಕಳೆಯುವ ಸ್ಥಿತಿಗೆ ತಂದುಬಿಟ್ಟರು ನೀ ಸಾಕಿ ಬೆಳೆಸಿದ ಮಕ್ಕಳು.

ಕಣ್ಣಿಗೆ ಕಾಣುವವರೆಲ್ಲಾ ಕೈ ಬಿಟ್ಟಾಗಲೇ , ಕಣ್ಣಿಗೆ ಕಾಣದೇ ಇರುವವನೊಬ್ಬ ಕೈ ಹಿಡಿದಿರುತ್ತಾನೆ ಹಾಗೆ ದೇವರೇ ನನ್ನನು ನಿನ್ನ ಬಳಿ ಕಳಿಸಿಕೊಟ್ಟಿರಬೇಕು, ಅದ್ಯಾವ ಶುಭ ಗಳಿಗೆಯಲ್ಲಿ ಅಶ್ರಮಕ್ಕೆ ಕಾಲಿಟ್ಟಿಯೊ ಗೊತ್ತಿಲ್ಲ, ಆಶ್ರಮದ ಚಿತ್ರಣವೇ ಬದಲಾಗಿ ಹೋಯ್ತು, ನಿನ್ನ ಒಂದು ಆ ನಗು ಆಶ್ರಮದಲ್ಲಿದ್ದ ಅದೆಷ್ಟೋ ಜನರ ನೋವ ಮರೆಸಿ ನಗುವಿಗೆ ಸಾಕ್ಷಿಯಾಯ್ತು.
ಅಮ್ಮಾ, ನಿಜ ನನಗಂತೂ ಮತ್ತೊಂದು ಮಗು ಹುಟ್ಟಿದ ಸಂಭ್ರಮದಂತಾಯ್ತು. ಚಿಕ್ಕ ಮಗುವಿನಂತೆ ನಿನ್ನೊಡನೆ ಹರಟೆ, ತಮಾಷೆ, ಕೋಪ, ಮುದ್ದಾಟ, ಎಷ್ಟರ ಮಟ್ಟಿಗೆ ಇತ್ತೆಂದರೆ ನಿನ್ನೊಡನೆ ನಾನು ಸಮಯ ಕಳೆಯದೆ ಹೋದ್ರೆ ಆ ದಿನ ನನಗೆ incomplete. ಅದೆಷ್ಟೇ ನಾವು ಕಿತ್ತಾಡಿದ್ರು ನಾನು ಬರುವಿಕೆಗಾಗಿ ಆಶಾ ಕಂಗಳಿಂದ ಕಾಯುತ್ತಿದ್ದ ನೀನು ನನಗೊಂದು ಪುಟ್ಟ ಪ್ರಪಂಚವೇ ಆಗಿಹೋದೆ

ನನ್ನ ಜನಸ್ನೇಹಿ ತಂಡ ನನ್ನ ಸಿಹಿ ಕ್ಷಣಗಳನ್ನೆಲ್ಲಾ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟರು, ನನಗಿಂತ ನಿನಗೆ ಅಭಿಮಾನಿಗಳ ಕಂಡು ನಾನೇ ಬೆರೆಗಾಗಿ ಹೋದೆ, ನಿನಗಾಗಿ ನೋಡಲು ಬಂದ ಅಭಿಮಾನಿಗಳ ಸಾಗರ ಕಂಡು, ನೀನು ತೆಗೆಯುವ ದೃಷ್ಟಿಗೆ ತಾರಬಳಾಗವೇ ತಲೆಬಾಗಿದೆ. ಜಾತಿ ಬೇದವಿಲ್ಲದೆ, ಮಕ್ಕಳು ದೊಡ್ಡವರೆನ್ನದೆ, ಎಲ್ಲರೂ ನಿನ್ನ ಈ ಮುಗ್ದ ನಗುವಿದೆ ಪ್ಯಾನ್ಸ್, ಬೈರಸಂದ್ರ ಅಜ್ಜಿ ಅಂದ್ರೆ ಸಾಕು ನಾ ಹೋದ ಕಡೆಯೆಲ್ಲಾ ಇಂದಿಗೂ ನಿನ್ನನ್ನೇ ಮೊದಲು ಕೇಳೋದು.
ನಿನಗೆ ತೋಡಿಸಿದ್ದು ಮೂಗುತಿ, ಖುಷಿಪಟ್ಟದು ನಾನೇ,
ನಿನಗೆ ತೋರಿಸಿದ್ದು ಪುನೀತ್ ಸಿನಿಮಾ ಹಾಗೂ ಪುನೀತ್ ಸಮಾಧಿ ಆದರೆ ಪುನೀತನಾಗಿದ್ದು ನಾನು.

ಇಷ್ಟರ ಮಟ್ಟಿಗೆ ಪ್ರೀತಿ ಸಂಪಾದಿಸಿದ್ದ ನಿನಗೆ ಅದ್ಯಾರ ಕಣ್ಣು ಬಿತ್ತೋ ಕಾಣೆ
ದಿಡೀರನೆ ಆರೋಗ್ಯ ಸಮಸ್ಯೆ ಯಿಂದ ಮಲಗಿಬಿಟ್ಟೆ, ನನ್ನ ಕಣ್ಣುಗಳು ತೇವವಾದವು, ನಿನ್ನ ಆಸ್ಪತ್ರೆಯ ದಿನಗಳು ಪ್ರತಿದಿನ ಆಶ್ರಮದಲ್ಲಿ ನೀರವ ಮೌನ. ನಿಮ್ಮ ಮನೆಯವರಿಗೆ ಸಂದೇಶ ತಲುಪಿಸಿದ್ದೆ. ಅದು ವ್ಯರ್ಥವಾಯಿತುಆಮ್ಮಾ ನಿನ್ನ ಕೂಗು ಮನೆಯವರಿಗೆ ಕೇಳಿಸಲಿಲ್ಲ, ನಮ್ಮ ಕೂಗು ದೇವರಿಗೆ ಕೇಳಿಸಿತ್ತು , ಮತ್ತೆ ನಮ್ಮೊಡನೆ ಬೆರೆಯಲು , ನಿನ್ನ ಹಾಡು ಅಶ್ರಮದಲ್ಲಿ ಹಾಡಲು ಕಳಿಸಿಕೊಟ್ಟುಬಿಟ್ಟ, ಗಟ್ಟಿಗಿತ್ತಿ ನೀನು,

ವಿಶೇಷ ಏನೆಂದರೆ ಹಳ್ಳಿ ಸಿಟಿಗಳಿಂದ ಶುರುವಾದ ನಿನ್ನ ಪ್ಯಾನ್ಸ್ club,
ಅಸ್ಟೆಲಿಯಾ ಮಟ್ಟಕ್ಕೆ ಹೋಗಿದೆ, ವಿಡಿಯೋ ಕಾಲ್ ಮಾಡಿ ಮಾತಾನಾಡುತ್ತಾರೆ ಅಂದರೆ ನಿಜಕ್ಕೂ ನೀನೆಷ್ಟು ಲಕ್ಕಿಯಾಗಿರಬೇಡ. ನಿನ್ನ ಆ ಮುಗ್ದತೆಯ ಪ್ರೀತಿ ಅವರನ್ನು ಎಷ್ಟು ಮುಗ್ದರನ್ನಾಗಿಸಿರಬೇಡ.
ಅದಕ್ಕೆ ಹೇಳೋದು ಯಾರನ್ನು ಕಡೆಗಣಿಸಬಾರದು ಅಂತ,
ನೀ ಕಡೆಗಣಿಸಿದ ಕಲ್ಲೊಂದು ಕೆತ್ತನೆಗೆ ಒಳಪಟ್ಟು ವಿಗ್ರಹವಾದರೆ ಕೈ ಮುಗಿದು ನಿಲ್ಲುವ ಸರದಿ ನಿನ್ನದಾಗಬಹುದು.
ಬರಹ. ಶ್ರೀಕಿ 🖊️



Leave a Reply